ಭಿತ್ತಿ ಕಾದಂಬರಿಯಲ್ಲಿ ಭೈರಪ್ಪನವರೇ ಹೇಳುವಂತೆ ಕುಸ್ತಿ ಪಟುಗಳ ಜೀವನವನ್ನು ಬಹಳ ಹತ್ತಿರದಿಂದ ನೋಡಿದವರು. ಇಂತದ್ದೆ ಒಂದು ಕತೆ ಈ ಭೀಮಕಾಯ.
ಸುಬ್ಬು ಎಂಬಾತ ಒಬ್ಬ ಅಪ್ರತಿಮ ಕುಸ್ತಿಪಟು. ಹನುಮಂತ ಹಾಗು ಅಂಬಾ ಭವಾನಿ ದೇವರ ಭಕ್ತ. ಮೈಸೂರು ಹಾಗು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅವನನ್ನು ಮೀರಿಸಿದ ಕುಸ್ತಿ ಪಟು ಇರಲಿಲ್ಲ. ಸುಬ್ಬು ಮೈಸೂರು ಪ್ರಾಂತ್ಯಕ್ಕೆ ಒಬ್ಬ ಕೊರಪಿಟ್ ಆಗಿರುತ್ತಾನೆ. ತಂಜಾವೂರು, ಧಾರವಾಡ, ಬೆಂಗಳೂರು ಹೀಗೆ ಅನೇಕ ಪ್ರದೇಶಗಳಲ್ಲಿ ಕುಸ್ತಿ ಪಂದ್ಯದಲ್ಲಿ ಗೆದ್ದಿರುತ್ತಾನೆ.
ಭೈರಪ್ಪನವರು ಕುಸ್ತಿ ಅಂದರೇನು, ಗರಡಿ ಮನೆ ಹೇಗಿರುತ್ತದೆ?, ಕುಸ್ತಿ ಹೊಡೆತದ ವಿಧಾನಗಳಾವುವು, ಕುಸ್ತಿ ಪಂದ್ಯದಲ್ಲಿ ಆಗುವ ಮೋಸಗಳ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದ್ದಾರೆ. ಬೇರೆ ಬೇರೆ ಪ್ರಾಂತ್ಯದ ಕುಸ್ತಿ/ಕುಸ್ತಿ ಪಟು ಗಳು ಹೇಗಿರುತ್ತಾರೆಂದು ಸೊಗಸಾಗಿ ವಿವರಿಸುತ್ತಾರೆ.
ತನ್ನ ವೃತ್ತಿಯಲ್ಲಿ ಸುಬ್ಬುವಿಗೆ ಸ್ನೇಹಿತರು ಹಾಗು ದ್ವೇಷಿಗಳು ಇಬ್ಬರು ಇದ್ದರು.
ಇಂಥಹ ಒಬ್ಬ ಕುಸ್ತಿ ಪಟು ಪುಟ್ಟು ಅಂಥ ಸ್ನೇಹಿತನ ವಂಚನೆ ಇಂದ ಒಬ್ಬ ಸೂಳೆಯ ಗೆಳೆತನ ಬೆಳೆಸುತ್ತಾನೆ. ಆಕೆಯೇ ರಾಜಮ್ಮ.
ರಾಜಮ್ಮ ಸುಬ್ಬುವನ್ನು ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಸುತ್ತಿರುತ್ತಾಳೆ. ದಿನ ಕಳೆದಂತೆ ಸುಬ್ಬುವು ರಾಜಮ್ಮನ ಪ್ರೀತಿಗೆ ಸಂಪೂರ್ಣವಾಗಿ ಒಳಪಡುತ್ತಾನೆ. ಆಕೆಯ ಸ್ನೇಹ ಭಾವ, ಪ್ರೀತಿ, ಎಲ್ಲಕ್ಕೂ ಮನ ಸೋಲುತ್ತಾನೆ. ಆಕೆಯನ್ನು ತನ್ಮಯ ಚಿತ್ತನಾಗಿ ಪ್ರೀತಿಸ ತೊಡಗುತ್ತಾನೆ. ನಿಧಾನವಾಗಿ ಕುಸ್ತಿಯ ಅಭ್ಯಾಸವನ್ನು ಬಿಡುತ್ತಾನೆ.
ಮೈಸೂರಿಗೆ ಕೊರಪಿಟ್ ಅಂತ ಹೆಸರು ಮಾಡಿದ ಸುಬ್ಬು ಒಬ್ಬ ಸಾಧಾರಣ ಪಂಜಾಬಿ ಕುಸ್ತಿ ಪಟುವಿಗೆ ಸೋಲುತ್ತಾನೆ. ಇತ್ತ ಸುಬ್ಬುವಿನ ಸ್ನೇಹಿತ ಚಂದ್ರು ಪುತ್ತುವಿನ ಸಹಾಯದಿಂದ ರಾಜಮ್ಮ ನನ್ನು ಬೇಟಿ ಮಾಡುತ್ತಾನೆ. ಸುಬ್ಬುವು ತನ್ನ ವೃತ್ತಿ ಜೀವನವನ್ನು ಹಾಳು ಮಾಡಿ ಕೊಲ್ಲದಂತೆ ತಡೆಯಬೇಕು ಅಂದು ಬೇಡಿ ಕೊಳ್ಳುತ್ತಾನೆ. ರಾಜಮ್ಮನಿಗೆ ಚಂದ್ರುವು ಒಬ್ಬ ಅಣ್ಣನ ರೀತಿ ಕಾಣಿಸುತ್ತಾನೆ. ತಾನು ಸುಬ್ಬುವನ್ನು ಹೇಗಾದರೂ ಮೊದಲಿನಂತೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಾಳೆ. ರಾಜಮ್ಮ, ತನ್ನಂತವಳಿಂದ ಸುಬ್ಬುವಿನ ಜೀವನ ಹಾಳಾಯಿತಲ್ಲ ಎಂದು ದುಃಖ ಪಡುತ್ತಾಳೆ.
ಸುಬ್ಬುವನ್ನು ತನ್ನ ವೃತ್ತಿಯ ಕಡೆ ತಿರುಗಿಸಲು ಬಹಳ ಪ್ರಯತ್ನಿಸುತ್ತಾಳೆ. ಇತ್ತ ಸುಬ್ಬುವಿನ ತಂದೆ ಮರಿಯಪ್ಪನವರಿಗೆ ಸುಬ್ಬುವಿನ ಬಗ್ಗೆ ತಿಳಿಯುತ್ತದೆ. ತನ್ನ ಮಗನನ್ನು ಒಬ್ಬ ಅತ್ಯುತ್ತಮ ಕುಸ್ತಿ ಪಟು ವನ್ನಾಗಿ ಮಾಡಿ ತನ್ನ ಸ್ನೇಹಿತ ಬಸಪ್ಪನ ಮಗಳು ಗೌರಿಗೆ ಕೊಟ್ಟು ಮದುವೆ ಮಾಡಬೇಕೆಂದು ಕೊಂಡಿರುತ್ತಾನೆ. ಮಗನ ಪರಿಸ್ಥಿತಿ ನೋಡಿ ಮರಿಯಪ್ಪನವರು ಹಾಸಿಗೆ ಹಿಡಿಯುತ್ತಾರೆ. ಸುಬ್ಬುವಿಗೆ ಕಾರಣ ತಿಳಿದಿದ್ದರೂ,
ರಾಜಮ್ಮನನ್ನು ದೂರ ಮಾಡಿ ಕೊಳ್ಳಲು ಸದ್ಯವಾಗದೆ ಖಿನ್ನನಾಗುತ್ತಾನೆ.
ಇದ್ದಕಿದ್ದ ಹಾಗೆ ಒಂದು ದಿನ ಸುಬ್ಬು ಕಾಣೆಯಾಗುತ್ತಾನೆ. ಎಷ್ಟು ಹುದುಕಿಸಿದರು ಸುಬ್ಬುವಿನ ಸುಳಿವು ಇರುವಿದಿಲ್ಲ. ರಾಜಮ್ಮ ತನ್ನಿಂದ ಹೀಗೆ ಆಯಿತೆಂದು ದುಃಖ ಪಡುತ್ತಾಳೆ. ಈ ಹೊತ್ತಿಗೆ ರಾಜಮ್ಮ ಉದರದಲ್ಲಿ ಸುಬ್ಬುವಿನ ಮಗು ಬೆಳೆಯುತ್ತಿರುತ್ತದೆ. ರಾಜಮ್ಮನಿಗೆ ಸುಬ್ಬುವಿನ ಗೆಳೆತನಕ್ಕಿಂತ ಏನು ಬೇಕಾಗಿರುವುದಿಲ್ಲ.
ಚಂದ್ರುವಿಗೆ ಸುಬ್ಬುವಿನ ಕಾಗದ ಒಂದು ಬರುತ್ತದೆ. ಸುಬ್ಬುವು ತಾನು ತನ್ನ ತಂದೆಗೆ ನಂಬಿದವರಿಗೆ ಮೋಸ ಮಾಡಿದೆನೆಂದು, ತನ್ನ ತಂದೆಯ ಆಸೆಯಂತೆ ವೃತ್ತಿಯಲ್ಲಿ ಕೊರಪಿಟ್ ಆಗಬೇಕೆಂದು, ಅಂತೋನಿ ಸಹಾಯದಿಂದ ಸೊಲ್ಲಾಪುರದ ಗರಡಿ ಮನೆಯಲ್ಲಿ ಕಲಿಯುತ್ತಿರುವುದಾಗಿ ತಿಳಿಸುತ್ತಿರುತ್ತಾನೆ. ಚಂದ್ರುವು ಸಂತಸ ಗೊಂಡು ಇತರರಿಗೂ ತಿಳಿಸಿ ಸೊಲ್ಲಾಪುರದ ಕಡೆಗೆ ಹೊರಡುತ್ತಾನೆ. ರಾಜಮ್ಮ ಸುಬ್ಬುವಿಗೆ ಒಂದು ಕಾಗದವನ್ನು ಕೊಡುತ್ತಾಳೆ.
ಚಂದ್ರು ಸುಬ್ಬು ಬದಲಾದುದನ್ನು ಕಂಡು ಸಂತೋಷ ಪಡುತ್ತಾನೆ. ಸುಬ್ಬುವಿನ ವೃತ್ತಿ ಜೀವನ ಹಾಳು ಮಾಡಲು ಮೈಲಾರಿ ಮತ್ತು ಸ್ನೇಹಿತರು ಕುತಂತ್ರ ಮಾಡಿ ರಾಜಮ್ಮನ ಪರಿಚಯ ಸುಬ್ಬುವಿಗೆ ಮಾಡಿಸಿದುದು ತಿಳಿಯುತ್ತದೆ. ಆದರೆ ರಾಜಮ್ಮ ದೇವತೆಯಂತ ಹೆಂಗಸು ಎಂಬುದು ಅರಿವಿರುತ್ತದೆ.
ಸುಬ್ಬು ಮತ್ತೆ ಮೊದಲಿನ ಸುಬ್ಬು ವಾಗಿರುತ್ತಾನೆ. ಹಲವಾರು ಕುಸ್ತಿಗಳಲ್ಲಿ ಗೆದ್ದಿರುತ್ತಾನೆ. ಚಂದ್ರು ಸುಬ್ಬುವಿಗೆ ತಿಳಿಸಿ ಪಂಜಾಬಿ ಕುಸ್ತಿ ಪಟುವಿನ ಮೇಲೆ ಬಾಜಿ ಕಟ್ಟಿಸುತ್ತಾನೆ. ಈ ಭಾರಿ ಸುಬ್ಬು ಒಂದೇ ಬಾರಿಗೆ ಪಂಜಬಿಯನ್ನು ಸೋಲಿಸಿ ಮೈಸೂರಿಗೆ ಕೊರಪಿಟ್ ಆಗುತ್ತಾನೆ.
ಸುಬ್ಬು ರಾಜಮ್ಮನ್ನನ್ನು ಬೇಟಿ ಮಾಡುತ್ತಾನೆ. ತನ್ನ ಮಗುವನ್ನು ನೋಡಿ ಸಂತೋಷ ಪಡುತ್ತಾನೆ. ರಾಜಮ್ಮ ಸುಬ್ಬುವಿಗೆ ಗೌರಿ ಯನ್ನು ಮದುವೆಯಾಗಬೇಕೆಂದು ಹಾಗು ತನ್ನ ಸ್ನೇಹವನ್ನು ಮುಂದುವರಿಸಬೇಕೆಂದು ಕೋರಿ ಕೊಳ್ಳುತ್ತಾಳೆ. ಕಡೆಗೆ ಸುಬ್ಬು ಒಪ್ಪಿ ಗೌರಿಯನ್ನು ಮದುವೆ ಮಾಡಿ ಕೊಳ್ಳುತ್ತಾನೆ. ಗೌರಿಗೆ ತನ್ನ ಜೀವನದ ಪೂರ ವೃತ್ತಾಂತ ವನ್ನು ತಿಳಿಸುತ್ತಾನೆ. ರಾಜಮ್ಮನಿಗೆ ಒಳ್ಳೆಯ ಸ್ನೇಹಿತನಾಗಿ ಮುಂದುವರೆಯುತ್ತಾನೆ.
ಕಾದಂಬರಿಯಲ್ಲಿ ರಾಜಮ್ಮನಿಗೆ ಸುಬ್ಬು ಮೋಸ ಮಾಡಿದ ಅನ್ನಿಸದರೂ, ರಾಜಮ್ಮನ ತ್ಯಾಗ ಎದ್ದು ನಿಲ್ಲುತ್ತದೆ. ಭೈರಪ್ಪನವರ ಕಾದಂಬರಿಯಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನ ಕೊಟ್ಟಿರುವುದನ್ನು ನಾವು ನೋಡಬಹುದು.
ಚಿ.ಸ.ನ.